ನೀವು ದೇವಸ್ಥಾನಕ್ಕೆ ಹೋಗುವವರಾಗಿದ್ದರೆ ಒಮ್ಮೆಯಾದರೂ ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ. ಆ ಪ್ರಶ್ನೆ ಮತ್ತು ಅದಕ್ಕೆ ಉತ್ತರವನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ ಬನ್ನಿ.
ಗಂಟೆಗಟ್ಟಲೆ ಕ್ಯೂನಲ್ಲಿ ದೇವರ ದರ್ಶನಕ್ಕಾಗಿ ನಿಂತು ಬೇಸತ್ತ ಭಕ್ತನೊಬ್ಬ ದೇವರನ್ನು ಪ್ರಶ್ನೆ ಮಾಡುತ್ತಾನೆ.
ಭಕ್ತ : “ಓ ದೇವರೇ!ದುಡ್ಡು ಕೊಟ್ಟ ಭಕ್ತರಿಗೆ ಹತ್ತಿರದಿಂದ ದರ್ಶಿಸಲು ಬೇರೊಂದು ಸಾಲು.ದುಡ್ಡು ಕೊಡದ ಭಕ್ತರಿಗೆ ದೂರದ ದರ್ಶನಕ್ಕಾಗಿ ಬೇರೆ ದೊಡ್ಡ ಸಾಲು.ಇದಾವ ನ್ಯಾಯ ಭಗವಂತನೇ?”ಎಂದು ಕೇಳುತ್ತಾನೆ.ಅದಕ್ಕೆ ಆ ದೇವರು ನಕ್ಕು ಉತ್ತರಿಸುತ್ತಾರೆ.
ದೇವರು : “ನಾನು ತಂದೆ ತಾಯಿಗಳು ದೈವಸಮಾನ ಎಂದೆ.ನೀವು ಅವರನ್ನು ಅದೇ ರೀತಿ ಪರಿಗಣಿಸಿ ಗೌರವಿಸುತ್ತೀರಾ?
ಗುರು ಬ್ರಹ್ಮ ಗುರು ವಿಷ್ಣು ಗುರು ಸಾಕ್ಷಾತ್ ಪರಬ್ರಹ್ಮ ಎಂದು ಹೇಳಿದೆ.ನೀವು ಅದೇ ರೀತಿ ಗುರುಗಳನ್ನು ಗೌರವಿಸುತ್ತೀರಾ?
ಜನಸೇವೆಯೇ ಜನಾರ್ದನ ಸೇವೆ ಎಂದು ಹೇಳಿದೆ.ನೀವು ಅದೇ ರೀತಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತೀರಾ?
ಇಲ್ಲಿ ಅಲ್ಲಿ ಎನ್ನದೆ ಎಲ್ಲೆಲ್ಲೂ ನಾನೇ ಇದ್ದೇನೆ.ಎಲ್ಲಿ ಹುಡುಕಿದರೂ ನಾನೇ ಇದ್ದೇನೆ. ನಿನ್ನಲ್ಲಿಯೂ ಎಲ್ಲರಲ್ಲಿಯೂ ನಾನೇ ಇರುವೆ. ನೀನು ನಂಬಲಿಲ್ಲ”.
“ನನ್ನ ಮೂರ್ತಿಯನ್ನು ದೇವಸ್ಥಾನದಲ್ಲಿರಿಸಿ , ದರ್ಶನದ ವೇಳೆಯನ್ನು , ದರ್ಶನದ ದರವನ್ನು , ಯಾರು ಎಷ್ಟು ಕಾಲ ಹೇಗೆ ದರ್ಶನ ಮಾಡಬೇಕೆಂದು, ನೀನೇ ನಿರ್ಧರಿಸಿದೆ”.
“ವಿವಿಧ ಪೂಜಾ ವಿಧಿ ವಿಧಾನಗಳನ್ನು , ಅವುಗಳ ದರಗಳನ್ನು ಸಹ ನೀನೇ ನಿರ್ಧರಿಸಿರುವೆ”.
“ಈ ಎಲ್ಲವನ್ನೂ ನೀನೇ ಮಾಡಿ ನನ್ನನ್ನು ಕೇಳುವುದು ಯಾವ ನ್ಯಾಯ?” ಎಂದು ಹೇಳಿದರು.
“ಹುಚ್ಚ ಮಾನವ, ನಿಜವಾಗಿಯೂ ನನ್ನನ್ನು ಕಾಣುವ ಹಂಬಲವಿದ್ದರೆ , ಪಶು , ಪಕ್ಷಿ , ವೃಕ್ಷ ಗಳಲ್ಲಿ ಕಾಣು ;ನಿನ್ನಲ್ಲಿ ಕಾಣು , ಇತರರಿಗೆ ಪ್ರೀತಿಯಿಂದ ಸೇವೆ ಮಾಡುವುದರ ಮೂಲಕ ಎಲ್ಲರಲ್ಲೂ ನನ್ನನ್ನೇ ಕಾಣು ;
ಮಾತಾಪಿತೃಗಳಲ್ಲಿ , ಗುರುಹಿರಿಯರಲ್ಲಿ ಕಾಣು ;ನದಿ ಬೆಟ್ಟ ಗುಡ್ಡಗಳಲ್ಲಿ ,ಈ ಸುಂದರವಾದ ಪ್ರಕೃತಿಯಲ್ಲಿ, ಆ ನೀಲಾಕಾಶದಲ್ಲಿ ಕಾಣು ; ಕೇವಲ ದೇವಸ್ಥಾನಕ್ಕೆ ಮಾತ್ರ ನನ್ನ ಇರುವಿಕೆಯನ್ನು ಸೀಮಿತಗೊಳಿಸಬೇಡ!!.”
ಎಂದು ಹೇಳಿದರು.
ಧನ್ಯವಾದಗಳು.